ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾಯರಿಗೆ ತೊಂಬತ್ತೇಳರ ಸಂಭ್ರಮ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಸೋಮವಾರ, ಮೇ 23 , 2016
|
ಮೇ 23 , 2016
|
ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾಯರಿಗೆ ತೊಂಬತ್ತೇಳರ ಸಂಭ್ರಮ
ಹಿರಿಯಡ್ಕ :
ಬಡಗುತಿಟ್ಟು ಯಕ್ಷಗಾನದ ಮದ್ದಳೆ ಮಾಂತ್ರಿಕ, ಏರು ಮದ್ದಳೆಯ ಜನಕ ಶ್ರೀ ಮಂದಾರ್ತಿ ಮೇಳವೊಂದರಲ್ಲೇ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮಗಾಣಿಗರೊಂದಿಗೆ ದೀರ್ಘ ಕಾಲ ತಿರುಗಾಟ ಮಾಡಿದ ಹಿರಿಯಡ್ಕ ಗೋಪಾಲ ರಾವ್ ಅವರಿಗೆ ಈಗ ವಯಸ್ಸು 97ರ ಹರೆಯ. ಅವರ ಶಿಷ್ಯರು, ಕಾಜಾರಗುತ್ತು ಯಕ್ಷಗಾನ ಮಂಡಳಿಯ ಸದಸ್ಯರು. ವಿದೇಶದಿಂದ ಬಂದು ಆ ಕಾಲದಲ್ಲಿ ಗೋಪಾಲ ರಾಯರಲ್ಲಿ ಯಕ್ಷಗಾನ ಕಲಿತು ಡಾಕ್ಟರೇಟ್ ಮಾಡಿದ ಅವರ ಶಿಷ್ಯೆ ಅಮೇರಿಕಾದ ಮಾರ್ಥಾ ಆಸ್ಟನ್ ಅವರ ಉಪಸ್ಥಿತಿಯಲ್ಲಿ ಮೇ 18ರಂದು ಹಿರಿಯಡ್ಕದಲ್ಲಿ ಅಭಿನಂದನಾ ಕಾರ್ಯಕ್ರಮ ಇರಿಸಿಕೊಂಡಿದ್ದರು.
ದೊಂದಿ ಬೆಳಕಿನ ಪೂರ್ವರಂಗದೊಂದಿಗೆ ಪರಂಪರೆಯ ಶೈಲಿಯ ಬಾಣಾಸುರ ಕಾಳಗ ಪ್ರಸಂಗದ ಪ್ರದರ್ಶನವೂ ಅಂದಿನ ವಿಶೇಷ ಕಾರ್ಯಕ್ರಮವಾಗಿತ್ತು. ಕೇಂದ್ರ ಸಂಸ್ಕತಿ ಇಲಾಖೆ, ಇನ್ನುಳಿದ ಸಂಸ್ಥೆಗಳ ಸಹಯೋಗದಲ್ಲಿ ದಾಖಲೀಕರಣಗೊಂಡ ಈ ಕಾರ್ಯಕ್ರಮ ಪೂರ್ವರಂಗ ಬಾಲಗೋಪಾಲ, ಅರ್ದನಾರೀಶ್ವರ ಒಡ್ಡೊಲಗ ಸಹಿತ ಅಳಿವಿನ ಅಂಚಿನಲ್ಲಿರುವ ಬಡಗುತಿಟ್ಟಿನ ಇತಿಹಾಸದ ಅಪೂರ್ವ ದೊಂದಿಬೆಳಕಿನ ಪೂರ್ವರಂಗದ ದಾಖಲೀಕರಣವಾಗಿದೆ.
ಹಿರಿಯಡ್ಕ ಗೋಪಾಲರಾಯರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿ ವರ್ಷ 47 ಸಂದಿದೆ. 97 ವರ್ಷದ ಈ ಹಿರಿಯರು ಉಡುಪಿ ಪರಿಸರದಲ್ಲಿ ಯಕ್ಷಗಾನ ಹಾಗಲ್ಲದೆ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಸಭೆ ಸಮಾರಂಭದಲ್ಲಿ ತಪ್ಪದೆ ಕಂಡು ಬರುವ ವ್ಯಕ್ತಿ. ದಶಕಗಳಿಂದ ಕಾಣುತ್ತಿರುವ ನಮ್ಮ ಮುಂದಿರುವ ಒಂದು ಬಿಳಿ ತಲೆ. ಯಕ್ಷಗಾನ ಲೋಕದ ಜೀವಂತ ದಂತ ಕಲೆಯಾಗಿರುವ ಇವರು ಸಂಘ ಸಂಸ್ಥೆಯವರು ಆಸಕ್ತರು ಕರೆದರೆ ಹೋಗಿ ತಮ್ಮ ಅನುಭವ ಪೂರ್ಣ ಮಾಹಿತಿ ತರಬೇತಿ ನೀಡುತ್ತಾರೆ. ಭಾಗವತ ಕುಂಜಾಲು ಶೇಷಗಿರಿ ಕಿಣಿ, ಹಾರಾಡಿ ರಾಮಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ಶಿರಿಯಾರ ಮಂಜುನಾಕ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೊಳ್ಕೆಬೈಲು ಶೀನ ನಾಯ್ಕ, ಕೊಕ್ಕರ್ಣೆ ನರಸಿಂಹ ಕಾಮತ್ ಮುಂತಾದವರನ್ನು ಒಳಗೊಂಡ ಬಡಗುತಿಟ್ಟು ಯಕ್ಷಗಾನದ ಸುವರ್ಣಯುಗದ ಓರ್ವ ಪ್ರತಿನಿಧಿಯಾಗಿ ನಮ್ಮೊಂದಿಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಗೋಪಾಲರಾಯರು ಒಬ್ಬರು. ಮದ್ದಳೆ ವಾದನದ ಗಂಟು ಉರುಳಿಕೆ, ಏರುಮದ್ದಳೆ, ಅಲ್ಲದೆ ಆಧುನಿಕ ಶಿಕ್ಷಣ ಪದ್ಧತಿಯು ಬಡಗುತಿಟ್ಟು ಯಕ್ಷಗಾನಕ್ಕೆ ರಾಯರ ಮೂರು ಮುಖ್ಯ ಕೊಡುಗೆಗಳು.
ಗೋಪಾಲರಾಯರ ಕಿರೀಟಕ್ಕೊಂದು ಗರಿ ಮೂಡಿದಂತೆ ಶತಮಾನಕ್ಕೆ ಹತ್ತಿರವಿರುವ ಈ ಇಳಿ ವಯಸ್ಸಿನ ಹಿರಿಯರಿಗೆ ಸಲ್ಲುತ್ತಿರುವ ಈ ಅಭಿನಂದನಾ ಗೌರವ ಬಡಗುತಿಟ್ಟಿನ ಹಿರಿಯ ಕೀರ್ತಿಶೇಷ ಕಲಾವಿದರಿಗೆ ಸಲ್ಲುತ್ತಿರುವ ಗೌರವ ಎನ್ನಬಹುದು.
|
|
|